ಜೂನ್ 29ರ ಸೋಮವಾರದಂದು ಆಷಾಢ ಹುಣ್ಣಿಮೆಯ ಭವ್ಯ ಪೂಜಾ ಮಹೋತ್ಸವ

ಭಕ್ತರ ಆರಾಧ್ಯ ದೈವ, ಶೃಂಗೇರಿ ಜಗದ್ಗುರು ಶಾರದಾ ಪೀಠದ ದಿವ್ಯ ಆಶೀರ್ವಾದದೊಂದಿಗೆ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಕೆ.ಜಿ. ದೇವಪಟ್ಟಣದಲ್ಲಿ ನೆಲೆನಿಂತಿರುವ ಶ್ರೀ ವಿದ್ಯಾಚೌಡೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ಜೂನ್ 29ರ ಸೋಮವಾರದಂದು ಆಷಾಢ ಹುಣ್ಣಿಮೆಯ ಭವ್ಯ ಪೂಜಾ ಮಹೋತ್ಸವ ಜರುಗಲಿದೆ!
ಹೌದು, ಆಷಾಢ ಹುಣ್ಣಿಮೆಯ ಈ ಪವಿತ್ರ ದಿನದಂದು ತಾಯಿಯ ಸನ್ನಿಧಿಯಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಸಾಂಗವಾಗಿ ನೆರವೇರಲಿವೆ.
ಜೂನ್ 28 ಭಾನುವಾರ ಮಧ್ಯರಾತ್ರಿ: ಶ್ರೀ ವಿದ್ಯಾಚೌಡೇಶ್ವರಿ ಅಮ್ಮನವರಿಗೆ ಅತ್ಯಂತ ಶ್ರದ್ಧಾಭಕ್ತಿಗಳಿಂದ ವಿಶೇಷ ನಿಶಾ ಪೂಜೆ ನಡೆಯಲಿದೆ.
ಜೂನ್ 29 ಸೋಮವಾರ: ತಾಯಿಗೆ ಕಣ್ಮನ ಸೆಳೆಯುವ ವಿಶೇಷ ಪುಷ್ಪಾಲಂಕಾರ ಹಾಗೂ ಮಹಾಮಂಗಳಾರತಿ ನೆರವೇರಲಿದೆ.
ಮುಖ್ಯವಾಗಿ ಜೂನ್ 29ರ ಬೆಳಗಿನ ಜಾವ 5:00 ಗಂಟೆಗೆ, ತಾಯಿಗೆ ಲೇಪಿತವಾದ ಪವಿತ್ರ ಅರಿಶಿನದಿಂದ ಭಕ್ತರಿಗೆ ಅರಿಶಿನ ಸ್ನಾನ ಹಾಗು ಸಾಲಿಗ್ರಾಮ ತೀರ್ಥವನ್ನು ಸಂಪ್ರೋಕ್ಷಣೆ ಮಾಡುವ ಪುಣ್ಯ ಕಾರ್ಯಕ್ರಮ ಜರುಗಲಿದೆ.
ಇದೇ ವೇಳೆ, ಭಕ್ತರ ಸುಖ-ಶಾಂತಿ ಮತ್ತು ಲೋಕ ಕಲ್ಯಾಣಕ್ಕಾಗಿ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಸುದರ್ಶನ ಹೋಮಗಳು ಶ್ರದ್ಧಾಭಕ್ತಿಗಳಿಂದ ನೆರವೇರಲಿವೆ. ತದನಂತರ ಹಂಗರಹಳ್ಳಿ ಬಸವಣ್ಣನವರ ನೇತೃತ್ವದಲ್ಲಿ, ಉತ್ಸವ ಮೂರ್ತಿಗಳಾದ ಶ್ರೀ ಶನೇಶ್ವರ ಸ್ವಾಮಿ, ಶ್ರೀ ವಿದ್ಯಾಚೌಡೇಶ್ವರಿ ಅಮ್ಮನವರು ಮತ್ತು ಚಿಕ್ಕ ಚೌಡೇಶ್ವರಿ ಅಮ್ಮನವರಿಗೆ ವಿಶೇಷ ಅಲಂಕಾರದೊಂದಿಗೆ ಭವ್ಯ ಪ್ರಾಕಾರೋತ್ಸವ ನಡೆಯಲಿದೆ.
ಲೋಕ ಕಲ್ಯಾಣಕ್ಕಾಗಿ ನಡೆಯುವ ಈ ಮಹಾ ಪೂಜಾ ಕೈಂಕರ್ಯದಲ್ಲಿ ಸಮಸ್ತ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕಾಗಿ ವಿನಂತಿ. ಕೆ.ಜಿ. ದೇವಪಟ್ಟಣದ ಕ್ಷೇತ್ರಕ್ಕೆ ಆಗಮಿಸಿ, ಶ್ರೀ ವಿದ್ಯಾಚೌಡೇಶ್ವರಿ ಅಮ್ಮನವರ ದರ್ಶನ ಪಡೆದು ಕೃಪಾಕಟಾಕ್ಷಕ್ಕೆ ಪಾತ್ರರಾಗಿ.